ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ :
ಸ್ವಚ್ಚತಾ ಕಾರ್ಯದಲ್ಲಿ ನಿರತರಾದವರಿಗೆ ಸಮಾಜ ನಿರ್ಲಕ್ಷ ವಹಿಸಿ ಆ ಕಾಯಕವನ್ನು ಅತ್ಯಂತ ಕೀಳಾಗಿ ಕಾಣುತ್ತಿದೆ. ಆದರೆ ವಾಸ್ತವದಲ್ಲಿ ಸ್ವಚ್ಛತೆ ಕೆಲಸ ಅತ್ಯಂತ ಶ್ರೇಷ್ಠ ಕಾಯಕ ಎಂದು ಲೇಖಕ, ಪೊಲೀಸ್ ಮುಖ್ಯ ಪೇದೆ ಸ್ವರೂಪ್ ಕೊಟ್ಟೂರು ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಹನಸಿ ಗ್ರಾಮದ ಶ್ರೀನಿರಂಜನ ಜಗದ್ಗುರು ಶಂಕರ ಸ್ವಾಮಿ ಪ್ರೌಢಶಾಲೆಯ ನೌಕರ ರೇವಣಸಿದ್ದಯ್ಯ ಇವರ ವಯೋನಿವೃತ್ತಿ ನಿಮಿತ್ತ ಏರ್ಪಡಿಸಿದ್ದ ಬೀಳ್ಕೋಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಸುತ್ತಲಿನ ಪರಿಸರ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗುವುದು ಇಷ್ಟ ದೇವರ ಪೂಜೆಗಿಂತ ಮಿಗಿಲು. ಸ್ವಚ್ಛತೆಗೆ ನಾವು ತೆರೆದುಕೊಂಡಷ್ಟು ಬಾಹ್ಯ ಪರಿಸರ ಮಾತ್ರವಲ್ಲ ನಮ್ಮ ಅಂತರಂಗದ ಶುದ್ದಿಯೂ ಆಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಡಾ. ಬಿ.ಆರ್ ಆಂಬೇಡ್ಕರ್.. ಹೀಗೆ ದೇಶ ಕಂಡ ಅನೇಕ ಮಹನೀಯರು ನಮಗೆ ಆದರ್ಶಪ್ರಾಯರು. ಶುದ್ಧಿ ಕೆಲಸವೇ ಆದಿ ಮತ್ತು ಅಂತಿಮ. ಶುದ್ಧಿ ಕಾರ್ಯಕ್ಕೆ ನೀವು ಅರ್ಪಿಸಿಕೊಂಡರೆ ನಿಮ್ಮ ಇಚ್ಛೆ, ಸಂಕಲ್ಪಗಳು ಸಿದ್ಧಿಸುತ್ತವೆ. ಅದು ಭವಿಷ್ಯದಲ್ಲಿ ನಿಮಗೆ ಪ್ರಸಿದ್ಧಿಯನ್ನೂ ತರುವಲ್ಲಿ ನೆರವಾಗುತ್ತದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಶಂಕರ ಸ್ವಾಮೀಜಿ ಮಾತನಾಡಿ, ಮೂರುವರೆ ದಶಕಗಳ ಕಾಲ ರೇವಣಸಿದ್ದಯ್ಯರವರು ವೃತ್ತಿ ಜೀವನದಲ್ಲಿ ಶಾಲೆ, ಮಠದ ಪ್ರತಿಯೊಂದು ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಸಹನಾಮೂರ್ತಿ, ಶಿಸ್ತಿನ ಸಿಪಾಯಿ ಆಗಿದ್ದ ರೇವಣಸಿದ್ಧಯ್ಯನವರ ಕ್ರೀಯಾಶೀಲತೆ, ಕಾಯಕದಲ್ಲಿ ತೋರಿಸುತ್ತಿದ್ದ ಶ್ರದ್ಧೆ, ಗುರು ನಿಷ್ಠೆ, ಸಮರ್ಪಣಾಭಾವ. ಮತ್ತೊಬ್ಬರಲ್ಲಿ ಕಾಣಲು ಸಾಧ್ಯವಿಲ್ಲ. ಇವರ ಸೇವೆ ಸದಾ ಸ್ಮರಣೀಯ ಎನ್ನುತ್ತಾ ಭಾವುಕರಾದರು.
ಶಾಲೆಯ ನಿವೃತ್ತ ಶಿಕ್ಷಕರಾದ ಬಿ.ಜಿ.ಸಿದ್ದನಗೌಡ, ಯು.ಅಜ್ಜಪ್ಪ, ನಂದೆಪ್ಪರವರು ಮಾತನಾಡುತ್ತಾ, ರೇವಣಸಿದ್ದಯ್ಯ ಉತ್ತಮ ಮತ್ತು ಅನುಭವಿ ಕೆಲಸಗಾರರಾಗಿದ್ದು, ಶ್ರೀಮಠದ, ಶಾಲೆಯ ಏಳಿಗೆ ಮತ್ತು ಶುಚಿತ್ವಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಇವರ ಸೇವಾ ಮನೋಭಾವ ಶ್ಲಾಘನೀಯ ಎಂದರು.
ಈ ವೇಳೆ ಮಾಲವಿ ಮತ್ತು ಹನಸಿ ಪ್ರೌಢಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಅಡುಗೆ ಸಹಾಯಕರು ಸೇರಿದಂತೆ ಅನೇಕರು ನಿವೃತ್ತಿ ಹೊಂದಿದ ರೇವಣಸಿದ್ದಯ್ಯ ದಂಪತಿಯನ್ನು ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಗುರು ಯು. ಗೌರಮ್ಮ, ಶಿಕ್ಷಕರಾದ ತಿರುಕಪ್ಪ, ಮಹಾದೇವಪ್ಪ, ಪುರೋಹಿತ ವೀರಪ್ಪಯ್ಯ ಮಾಲವಿ, ಮುಖ್ಯಗುರು ಶಿವಪ್ರಕಾಶ್ ಇತರರಿದ್ದರು. ವಿದ್ಯಾರ್ಥಿನಿಯರಾದ ಪಲ್ಲವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕರಾದ ಲೋಕೇಶ ನಾಯ್ಕ್, ಚೇತನ್ ಕಾರ್ಯಕ್ರಮ ನಿರ್ವಹಿಸಿದರು.