ತ್ಯಾಗಭೂಮಿ ಡಿಜಿಟಲ್ ಡೆಸ್ಕ್
ಹರಪನಹಳ್ಳಿ :
ಬಹುಮತ ಪಡೆದು ಈ ಬಾರಿ ಒಗ್ಗಟ್ಟು ಪ್ರದರ್ಶಿಸಲು ಸಿದ್ದತೆ ಮಾಡಿಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಲಯದ ತಡೆಯಾಜ್ಞೆಯಿಂದ ನಿರಾಸೆ ಉಂಟಾಯಿತು.
ಚುನಾವಣೆ ಹಿನ್ನೆಲೆಯಲ್ಲಿ ಬೆಳಿಗ್ಗೆ ಪುರಸಭೆ ಆವರಣ ಪ್ರವೇಶಿಸುವ ರಸ್ತೆಗಳಿಗೆ ಬ್ಯಾರಿಕೆಡ್ ಹಾಕಿ ಬಂದ್ ಮಾಡಿ ಪೋಲಿಸ್ ಬಂದೋಬಸ್ತ್ ಹಾಕಲಾಗಿತ್ತು. ಬಿಜೆಪಿಯಿಂದ ಕೌಟಿ ಸುಮಾ ಮತ್ತು ಕಾಂಗ್ರೆಸ್ ಪಕ್ಷದಿಂದ ಫಾತಿಮಾಬಿ ಅವರು ನಾಮಪತ್ರ ಸಲ್ಲಿಸಿ ತೆರಳಿದ್ದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮತ್ತು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಸದಸ್ಯರು ಮತದಾನ ಪ್ರಕ್ರಿಯೆ ಸಮಯಕ್ಕೆ ಸಭಾಂಗಣ ಪ್ರವೇಶಿಸಿದ ಕೆಲವೊತ್ತಿನಲ್ಲಿ ಹೈಕೋರ್ಟ್ ತಡೆಯಾಜ್ಞೆ ವಿಷಯ ತಿಳಿದು ಹಿಂತಿರುಗಿದ್ದು ಸಂಭ್ರಮಾಚರಣೆಗೆ ಸಿದ್ದ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.

ಸಭೆ ಆರಂಭಕ್ಕೂ ಮುನ್ನವೇ ಅಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸದಸ್ಯೆ ಕೌಟಿ ಸುಮಾ, ಸದಸ್ಯರಾದ ಹರಾಳು ಅಶೋಕ, ಕಿರಣ್ ಶ್ಯಾನುಬೋಗ, ವಿನಯ್ ಕುಮಾರ, ಎಂ.ಕೆ.ಜಾವಿದ್, ರೊಕ್ಕಪ್ಪ ಅವರು ಪುರಸಭೆ ಚುನಾವಣೆಗೆ ಧಾರವಾಡ ಪೀಠ ತಾತ್ಕಾಲಿಕ ತಡೆ ನೀಡಿದ್ದು ಚುನಾವಣೆ ಮುಂದೂಡುವಂತೆ ಲಿಖಿತ ದೂರು ಸಲ್ಲಿಸಿದ್ದರು. ಅವರ ಮನವಿ ಪರಿಶೀಲಿಸಿದ ಬಳಿಕ ನ್ಯಾಯಾಲಯವು ಆ 20ರಂದು ನೀಡಿರುವ ಆದೇಶ ಗೌರವಿಸಿ ಸಭೆ ಮುಂದೂಡಲಾಗಿದೆ’ ಎಂದು ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಸ್ಪಷ್ಟಪಡಿಸಿದರು.
ತಡೆಯಾಜ್ಞೆ ವಾಗ್ವಾದ
ಕಾಂಗ್ರೆಸ್ ಪಕ್ಷದಿಂದ 14 ಜನ ಸದಸ್ಯರು ಗೆದ್ದಿದ್ದಾರೆ. ಫಾತೀಮಾಬಿ ಅವರನ್ನು ಅಭ್ಯರ್ಥಿಯಾಗಿ ನಿರ್ಧರಿಸಲಾಗಿದೆ. ಆದರೂ ನಮ್ಮ ಪಕ್ಷದವರೇ ಹೈಕೋರ್ಟ್ಗೆ ಹೋಗಿದ್ದರಿಂದ ಕಾಂಗ್ರೆಸ್ ಗೆಲುವಿಗೆ ತೊಡಕು ಉಂಟಾಗಿದೆ. ಸಾಮಾನ್ಯ ಮಹಿಳೆ ಮೀಸಲಾತಿಯಡಿ ನಮ್ಮ ಸಮಾಜಕ್ಕೆ ಏಕೆ ನ್ಯಾಯ ಕಲ್ಪಿಸಲಿಲ್ಲ ಎಂದು ಶಾಸಕರ ಕಚೇರಿ ಆವರಣದಲ್ಲಿ ಗದ್ದಲ ನಡೆಸಿದ ಮುಸ್ಲಿಂ ಮುಖಂಡರನ್ನು ಶಾಸಕಿ ಲತಾ ಮಲ್ಲಿಕಾರ್ಜುನ್ ಸಮಧಾನಪಡಿಸಿ ಕಳಿಸಿದರು. ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ ಕಂಡುಬಂದಿತು.
“ನಾವು ಚುನಾವಣೆ ಎದುರಿಸಲು ಒಗ್ಗಟ್ಟಾಗಿದ್ದೆವು. ಹರಪನಹಳ್ಳಿ ಸೇರಿ ಐದು ಪುರಸಭೆ ಚುನಾವಣೆಗೆ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವು ಬಳಿಕ ಇದೇ ಆಯ್ಕೆ ಪ್ರಕ್ರಿಯೆ ಮುಂದುವರೆಯುತ್ತದೆ.”
– ಎಂ,ಪಿ.ಲತಾ ಮಲ್ಲಿಕಾರ್ಜುನ್. ಹರಪನಹಳ್ಳಿ ಶಾಸಕರು.
ನಮ್ಮ ಪುರಸಭೆಯ ಸದಸ್ಯರೊಬ್ಬರು ಮೀಸಲಾತಿ ಬದಲಾವಣೆಗೆ ಕೋರಿ ಧಾರವಾಡ ಪೀಠದಲ್ಲಿ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ತಡೆ ನೀಡಿದೆ. ಇದರ ಆಧಾರದ ಮೇಲೆ ಸಭೆ ಚುನಾವಣೆ ಮುಂದುವರೆಸಬಾರದು ಎಂದು ಸಲ್ಲಿಸಿದ್ದ ಮನವಿಗೆ ಚುನಾವಣೆ ಅಧಿಕಾರಿಗಳು ಸ್ಪಂದಿಸಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದಕ್ಕೆ ಬಿಜೆಪಿ ಸದಸ್ಯರು ಸ್ವಾಗತಿಸಿದ್ದೇವೆ’
– ಎಚ್.ಎಂ.ಅಶೋಕ, ನಿಕಟಪೂರ್ವ ಪುರಸಭೆ ಅಧ್ಯಕ್ಷ.